Mayavathi: ಬಹುಜನ ಸಮಾಜವಾದಿ ಪಕ್ಷದ ಮಾಯಾವತಿಯವರ ಉತ್ತರಾಧಿಕಾರಿಯಾಗಿ ಆಕಾಶ್ ಆನಂದ್, ಯುವ ನಾಯಕತ್ವಕ್ಕೆ ಮಣೆ ಹಾಕಿದ BSP!
Mayavathi: ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿಯವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ಮುಂದಿನ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ ಎಂದು ಪಕ್ಷದ ನಾಯಕ ಸರ್ವರ್ ಮಲಿಕ್ ಇಂದು, ಭಾನುವಾರ ಹೇಳಿದ್ದಾರೆ.
ಈ ವಿಷಯವನ್ನು ಸುದ್ದಿ ಸಂಸ್ಥೆ ‘ಎಎನ್ಐ’ ವರದಿ ಮಾಡಿದೆ. ಆನಂದ್ ಅವರು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಬಹುಜನ ಸಮಾಜವಾದಿ ಪಕ್ಷವು ಹೀನಾಯ ಪ್ರದರ್ಶನ ಕಂಡುಬಂದ ಹಿನ್ನೆಲೆಯಲ್ಲಿ ಮಾಯಾವತಿಯವರ ಯುಗಾಂತ್ರ್ಯ ಆಗಿದೆ ಎನ್ನುವ ಚರ್ಚೆಗಳು ಕೇಳಿ ಬಂದಿದ್ದವು. ಹೇಗಾದರೂ ಸರಿ ಬಹು ಜನ ಸಮಾಜವಾದಿ ಪಕ್ಷವನ್ನು ಮರಳಿ ಮುಖ್ಯ ವಾಹಿನಿಗೆ ತರಲು ಇದೀಗ ವೇದಿಕೆ ಸಿದ್ಧಗೊಂಡಿದೆ. ಯುವ ನಾಯಕತ್ವಕ್ಕೆ ಬಿಎಸ್ಪಿ ಮನ್ನಣೆ ನೀಡಿದೆ.
ಆಕಾಶ್ ಆನಂದ್ ರವರು ಮುಂಬರುವ ಪಂಜಾಬ್ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಎಸ್ಪಿ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಮಾಯಾವತಿಯವರ ರಾಜಕೀಯ ಉತ್ತರಾಧಿಕಾರಿ ಸ್ಥಾನದ ಚರ್ಚೆ ಆಗಾಗ ಕೇಳಿ ಬಂದಿತ್ತು. ಆದರೆ ಆಸ್ಥಾನಕ್ಕೆ ಆಕಾಶ್ ಆನಂದ್ ಸಂಪೂರ್ಣವಾಗಿ ಜವಾಬ್ದಾರಿ ವಹಿಸಿಕೊಳ್ಳಲು ಕಾಲಾವಕಾಶ ಬೇಕೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಬದಲಾದ ಕಾಲಮಾನದಲ್ಲಿ ಆಕಾಶ ಆನಂದ್ ಗೆ ಬಿಎಸ್ಪಿ ಪಕ್ಷದ ನೇತೃತ್ವ ಸಿಕ್ಕಿದೆ.