ದರ್ಶನ್ ಫ್ಯಾನ್ಸ್ ಬಗ್ಗೆ ಮಾತನಾಡಿ ಚಾಲೆಂಜ್ ಹಾಕಿದ ಉಮಾಪತಿ ಗೌಡ
ದರ್ಶನ್ ಫ್ಯಾನ್ಸ್ ಬಗ್ಗೆ ಮಾತನಾಡಿ ಚಾಲೆಂಜ್ ಹಾಕಿದ ಉಮಾಪತಿ ಗೌಡ
![](https://hosavishya.com/wp-content/uploads/2024/07/images-56.jpeg)
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೌಡ, ದರ್ಶನ್ ಅವರ ಅಭಿಮಾನಿಗಳು ನೀವು ದರ್ಶನ್ ನಟನೆಯಿಂದ ಹಣ ಮಾಡಿಕೊಂಡಿದ್ದೀರಿ ಎಂದು ಹೇಳಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಚಿಕ್ಕವನಿದ್ದಾಗ ಅಂದರೆ ಆವಾಗ ನೋಡಿದ್ದೇನಲ್ಲ, ಅಷ್ಟು ದುಡ್ಡನ್ನು ದರ್ಶನ್ ಇವತ್ತಿನವರೆಗೂ ನೋಡಿಲ್ಲ. ದೊಡ್ಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ. ನಾನು ಮನೆ ಕಟ್ಟಿರುವ ಈ ಜಾಗವಿದೆಯಲ್ಲಾ ಇದು 1.5 ಎಕರೆ ಭೂಮಿಯಾಗಿದೆ. ನಮ್ಮನೆ ಸುತ್ತಲಿರುವ ಜಾಗ ಮಾರಾಟ ಮಾಡಿದರೆ 2 ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡುವಷ್ಟು ಹಣ ಬರುತ್ತದೆ. ಆದರೆ, ನನಗೆ ಅಗತ್ಯವಿಲ್ಲದ ಕಾರಣ ದುಬಾರಿ ಬೆಲೆಯ ಜಾಗದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾವು ವಾಸವಿರುವ ಹೆಚ್ಎಸ್ಆರ್ ಲೇಔಟ್ನಲ್ಲಿ ಒಂದು ಚದರ ಅಡಿಗೆ 45 ಸಾವಿರ ರೂ.ನಂತೆ ಮಾರಾಟ ಆಗುತ್ತಿದೆ. ರೆಸಿಡೆನ್ಸಿಯಲ್ ಜಾಗವಾದರೆ 30 ಸಾವಿರ ರೂ. ಬೆಲೆ ಬಾಳುತ್ತದೆ. ಒಂದೂವರೆ ಎಕರೆ ಭೂಮಿಗೆ ಎಷ್ಟಾಗುತ್ತದೆ ಹೇಳಿ? ಇಲ್ಲಿ ನಮ್ಮನೆ ಸುತ್ತ ಮುತ್ತಲೂ ನಮ್ಮ ಕುಟುಂಬಕ್ಕೆ ಸೇರಿ ಎಷ್ಟೋ ಎಕರೆ ಭೂಮಿಯಿದೆ. ನಮ್ಮ ಮನೆಯವರಿಗೆ ಸೇರಿದ ಒಂದೊಂದು ತುಂಡು ಭೂಮಿ ಕೂಡ 2 ರಿಂದ 5 ಎಕರೆ ಇದೆ. ನಾವು ಅವರ ಹೆಸರೇಳಿಕೊಂಡು ಬದುಕುವುದು ಅಲ್ಲ, ನಮ್ಮಿಂದ ಅವರು ಅನ್ನ ತಿನ್ನುತ್ತಿದ್ದಾರೆ. ನಾನು ದುಡ್ಡು ಕೊಟ್ಟು ಸಿನಿಮಾ ಮಾಡಿದ್ದೇನೆ ಹೊರತು ಯಾವುದೇ ಪುಗಸಟ್ಟೆ ಸಿನಿಮಾ ಮಾಡಿಸಿಲ್ಲ. ದುಡ್ಡು ಕೊಟ್ಟಿದ್ದೀನಿ ಆಕ್ಟ್ ಮಾಡಿಸಿಕೊಂಡಿದ್ದೀನಿ. ದುಡ್ಡು ಕೊಟ್ಟು ಕುಣಿಸಿದ್ದೀನಿ, ಯಾವುದಕ್ಕೂ ಫ್ರೀಯಾಗಿ ಮಾಡಿಸಿಕೊಂಡಿಲ್ಲ ಎಂದು ಚಾಟಿ ಬೀಸಿದರು.
ಅವರ ಸಿನಿಮಾಗಳನ್ನು ಮಾಧ್ಯಮದಲ್ಲಿ ಪ್ರಚಾರ ಮಾಡಲು ಬ್ಯಾನ್ ಮಾಡಿದಾಗ ಯಾಕೆ ಸಿನಿಮಾಗಳು ಸಕ್ಸಸ್ ಆಗಲಿಲ್ಲ. ಸಿನಿಮಾ ನಟ ನಟಿಯರ ಬೆಳವಣಿಗೆಯಲ್ಲಿ ಮಾಧ್ಯಮದವರ ಕೊಡುಗೆ ಮತ್ತು ನಿರ್ಮಾಪಕದ ಕೊಡುಗೆಗಳು ಸಾಕಷ್ಟಿರುತ್ತದೆ. ನಮ್ಮನೆ ಕಾರ್ಯಕ್ರಮಕ್ಕೆ ಯಾವೊಬ್ಬ ನಟರನ್ನೂ ನಾನು ಕರೆದಿಲ್ಲ. ಹಾಗೇನಾದರೂ ಕರೆದಿದ್ದರೆ ಚಿಕ್ಕಣ್ಣ ಮಾತ್ರ, ಏಕೆಂದರೆ ಚಿಕ್ಕಣ್ಣ ನನಗೆ ಒಬ್ಬ ಸ್ನೇಹಿತನಾಗಿ, ನನ್ನ ಸಹೋದರನಾಗಿ ನಿಂತಿದ್ದಾನೆ. ಅವರಾರೋ ಬೊಗಳುತ್ತಾರೆಂದರೆ ನೀವು ನಾವ್ಯಾಕೆ ಕೇರ್ ಮಾಡಬೇಕು ಎಂದರು. ಅಷ್ಟು ತಾಕತ್ತಿದ್ದರೆ ಫ್ಯಾನ್ಸ್ಗೆ ಹೋಗಿ ಬಿಡಿಸಿಕೊಂಡು ಬರಲು ಹೇಳಿ ಎಂದು ಉಮಾಪತಿಗೌಡ ಸವಾಲು ಹಾಕಿದರು.
ಈಗಿನ ಕಾಲ ಹೇಗಿದೆ ಎಂದರೆ ನಾವು-ನೀವು ಉದ್ಧಾರ ಆಗಲು ಕಷ್ಟಪಡುತ್ತಿದ್ದರೆ, ಇವರೆಲ್ಲರೂ ಹಾಳಾಗಲು ಕಷ್ಟಪಡುತ್ತಿದ್ದಾರೆ. ಅವರ ಅಭಿಮಾನಿಗಳು ಅತಿರೇಕ ಮೀರಿದರೆ ಕಾನೂನು ಕ್ರಮದಲ್ಲಿ ಏನಾಗಬೇಕೋ ಅದು ಆಗುತ್ತದೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೌಡ ಹೇಳಿದರು.